poem: ABOUT FARMERS (DUDIYUVA KAI NEE MADIYADIRU)
ದುಡಿಯುವ ಕೈ ನೀ ಮಡಿಯದಿರು.
ದುಡಿಯುವ ಕೈ ನೀ ಮಡಿಯದಿರು
ಸುಡುವ ಕಷ್ಟಗಳೆಷ್ಟೇ ಬರಲಿ
ಮಾಡುವ ಕಾಯಕದೊಳಿಷ್ಟವು ಇರಲಿ
ಚಿನ್ನಕು ಮಿಗಿಲು ಅನ್ನವನು
ಈ ಜಗಕೆ ನೀನೆ ಇತ್ತವನು.
ಮಸುಕಲಿ ಎದ್ದು,ಹೊಲದಲಿ ಸದ್ದು
ಮಾಡುತಲಿರುವ ನಿನ್ನನು ನೋಡಿ
ನಾಚುತ ತಾ ನೇಸರ ಮೂಡಿ
ತಾ ಕೆನ್ನೆಯ ಕೆಂಪನೆ ಮಾಡಿದನು.
ಸುಡು ಬಿಸಿಲಿಗು ಜಗ್ಗದ ನಿನ್ನನು
ಮೆಚ್ಚುವ ಗಡಿಯ ಕಾಯ್ವ ಯೋಧನು.
ಮಳೆಗೆ ಕೊಡೆ ಹಿಡಿಯದ,ಚಳಿಗೂ
ಚಳಿಯಿಡಿಸುವ ಧೃತಿಗೆಡದ ಮೈ ಅದು
ಕೈ ಕೆಸರಾದರು ಲೋಕದ ಬಾಯಿಗೆ ಮೊಸರದು
ತಾ ಸೋತರೂ ಜಗವ ಗೆಲಿಸುವ ತ್ಯಾಗವು
ನೀನಗಲ್ಲದೆ ಮತ್ಯಾರಿಗಿದೆ ಆ ಧೈರ್ಯವು?
ಬೆಳೆವುದು ನೂರಾದರೆ ಪಡೆವುದು ಚೂರು
ಕೊಳಗಕೂ ಮೀರಿದ ಆಸೆಯಾದರೂ
ಬಳಗಕೆಲ್ಲ ಸುರಿದಳೆವ ಒತ್ತಾಸೆಯು ನಿನದು
ಬೆನ್ನೆಲುಬು ನೀನಾದರು ಜಗಕೆ
ಜಗವೇ ನಿಂತಿದೆ ನಿನ್ನಯ ಬೆನ್ನಿಗೆ.
ಉರುಳಿಗೆ ಕೊರಳನೊಡ್ಡದಿರು
ಬೆರಳು ಮಾಡದ ಹಾಗೆ ನಿನ್ನೆಡೆಗೆ.
ವಿರಮಿಸದಿರು ಬದುಕ ಮಾಡು
ಹೊನ್ನ ,ಒಮ್ಮೆ ಮಾತ್ರ ಮನುಜ ಜನ್ಮ
ನೋಡಲಿ ಎಲ್ಲರೂ ಕೊರಳೆತ್ತಿ ನಿನ್ನ.
ರಚನೆ: ಕುಮಾರ್. ಬಿ.ಬಾಗೀವಾಳ್.p
Comments
Post a Comment